Monday 16 April 2012

ಬಾಲ್ಯ


ಮಾಮಿಡಿ ಚೈತ್ರದ ಸೋನೆ
ಚೆಲುವ ಚಿತ್ತಾರ ಬಾಯಾರಿದರು ತೀರದ ಉತ್ಸಾಹ
ಮುಗ್ಧತೆ ಮನದಲ್ಲಿ ತುಂಟತನ ತುಟಿಯಲ್ಲಿ
ಆಲದ ಬೀಳಿನ ಜೋಕಾಲಿ ಅಲ್ಲಿ ಇಲ್ಲಿ ಜಿಗಿಯುವ ಚಿಗರೆ ಮರಿಗಳು

ಎಪ್ರಿಲ್ ಮೇ ಬಂತೆಂದರೆ ಅಭ್ಯಾಸಕ್ಕೆ ಜೈ
ಹನುಮಂತನ ಬಾಲ ಏರಿಕೇರಿ ಎಲ್ಲೆಲ್ಲೂ ಪೋರರದೇ ಸೈ
ಮರದ ಕತ್ತಿ ಗುರಾಣಿ ಅದೇನೋ ಆವೇಶ ಪರಾಕ್ರಮ
ಮರಳಲ್ಲಿ ಮನೆಕಟ್ಟು ಗುಲಗಂಜಿಯ ಸರ ಪೋಣಿಸು

ನದಿಯ ದಡ ಕಡಲ ತೀರ ತಿರುಗಿದ್ದು ಗೊತ್ತಾದರೆ
ಅಪ್ಪನಿಂದ ಕಣ್ಣು ಉರಿ ಬೆದರಿಕೆ ಬೆನ್ನ ಮೇಲೆ ಹೊಡೆತ
ಕದ್ದು ಮುಚ್ಚಿ ಪೆಪ್ಸಿ ತಿಂದು ಬಾಯೆಲ್ಲ ಕೆಂಪು
ಮಾವಿನ ಪಚಡಿ ಕಿಕ್ ಕೊಡುತ್ತಿತ್ತು ಉಪ್ಪು ಖಾರ ಅರಶಿನ

ಹಿರಿಯರೆಲ್ಲ ಅವರವರದೇ ಯೋಚನೆ ವಿಚಾರ ಚಾಡಿ ಹೊಟ್ಟೆಯುರಿಸಿಕೊಳ್ಳುತ್ತಿದ್ದರೆ
ಕರಂಜಿಕಾಯಿ ಮರಹತ್ತು, ಸುರಂಜಿ ಹೂವನ್ನ ಕಿತ್ತುಕೊಡುತ್ತಿದ್ದ ತಮ್ಮ
ಪುಂಡು ಪೋಕರಿಯ ಪರಮಾವಧಿ
ಸೌತೆ ಬಳ್ಳಿ ಬಿಂಬುಳಿ ಅಮಟೆ ಕಾಯಿಗಳೇ ಮಧ್ಯಾಹ್ನದ ಪರಮ್ಮಾನ್ನ

ಸಂಜೆಯವರೆಗೂ ಮೈಕೈಯೆಲ್ಲಾ ಕೆಂಪುಕಪ್ಪು ಧೂಳು
ಸಮುದ್ರದ ಮೊರೆತ ಸಗಣಿ ಹಾಕಿದ ಅಂಗಳ ದಿಟ್ಟ ದೃಷ್ಟಿ ಆಕಾಶದಲ್ಲಿ
ಶುರುವಾಗುತ್ತಿತ್ತು ಮಗ್ಗಿ ಹರಟೆ ಭಜನಾಮಂಡಳಿ
ದಣಿದಿದ್ದ ದೇಹಕ್ಕೆ ಒಂದು ಪರಿ ಸುಖ ಸಂತೃಪ್ತಿ

ಬಾಲ್ಯದ ದಿನಗಳ ನೆನಪುಗಳೇ ಮಧುರ
ಎದೆಯಲ್ಲಿ ಎನೋ ಒಂದು ಪ್ರೀತಿ ದೂರಾದ ಭಾವನೆ
ಕಾಲಕ್ಕೆ ತಕ್ಕಂತೆ ಹೊಂದುಕೊಳ್ಳುವವರು ನಾವು
ಬೆಳದಿಂಗಳು ಪಸರಿಸಿದ ರಾತ್ರಿ ಕಳೆದು ತಿಳಿಹಗಲಾಯಿತು

                            -ಶಿಲ್ಪ ಶಾಸ್ತ್ರಿ







No comments:

Post a Comment